Slide
Slide
Slide
previous arrow
next arrow

ಕ್ರಿಯಾಶೀಲ ಶಿಕ್ಷಕ ಸುರೇಶ ನಾಯಕ‌್‌ಗೆ ಗೌರವ ಸನ್ಮಾನ: ಬೀಳ್ಕೊಡುಗೆ

300x250 AD

ದಾಂಡೇಲಿ : ಶಿಕ್ಷಣ ಕ್ಷೇತ್ರದಲ್ಲಿ ಅನೇಕ ವರ್ಷಗಳಿಂದ ಅನುಪಮ ಸೇವೆಯನ್ನು ಸಲ್ಲಿಸಿ ನಿವೃತ್ತರಾದ ಜನಸ್ನೇಹಿ ನಡವಳಿಕೆಯ ಕ್ರಿಯಾಶೀಲ ಶಿಕ್ಷಕರು, ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷರು ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷರು ಆಗಿರುವ ಸುರೇಶ ಮಾಸ್ತರ ಖ್ಯಾತಿಯ ಸುರೇಶ ನಾಯಕ ಅವರಿಗೆ ನಗರದ ನಾಡವರ ಸಮಾಜ ಭವನದಲ್ಲಿ ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕು ಘಟಕದ ಆಶ್ರಯದಡಿ ಗೌರವ ಸನ್ಮಾನದೊಂದಿಗೆ ಬೀಳ್ಕೊಡುವ ಹಾಗೂ ಸರಕಾರಿ ನೌಕರರ ಸಂಘದ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಉತ್ಪಲ್ ಶಿರೋಡ್ಕರ್ ಅವರನ್ನು ಸ್ವಾಗತಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ದಾಂಡೇಲಿಯಲ್ಲಿ ಹಲವಾರು ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ಸುರೇಶ ನಾಯಕರು ಶಿಕ್ಷಕರ ಸಂಘ, ನೌಕರರ ಸಂಘದಲ್ಲಿ ಸಕ್ರಿಯರಾಗಿದ್ದರು. ಇತ್ತೀಚೆಗೆ ಅವರು ಸೇವಾ ನಿವೃತ್ತರಾದ ಹಿನ್ನಲೆಯಲ್ಲಿ ಅವರ ಸರಕಾರಿ ನೌಕರರ ಸಂಘದ ಅಧ್ಯಕ್ಷತೆಯ ಅವಧಿಯೂ ಕೂಡಾ ಅಂತಿಮವಾಗಿತ್ತು. ಆ ಹಿನ್ನಲೆಯಲ್ಲಿ ಸರಕಾರಿ ನೌಕರರ ಸಂಘ ಬೀಳ್ಕೊಡುಗೆ ಕಾರ್ಯಕ್ರಮ ಹಮ್ಮಿಕೊಂಡಿತ್ತು.

ಸರಕಾರಿ ನೌಕರರ ಸಂಘದ ತಾಲೂಕು ಘಟಕದ ವತಿಯಿಂದ ಸುರೇಶ ನಾಯಕ ದಂಪತಿಯವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್. ವಾಸರೆಯವರು ಮಾತನಾಡುತ್ತಾ, ಸುರೇಶ ನಾಯಕರ ಸ್ನೇಹಪರ ಜೀವನ, ಸಂಘಟನಾ ಚಾತುರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ದಾಂಡೇಲಿಯಲ್ಲಿ ಸರಕಾರಿ ನೌಕರರು ಹಾಗೂ ಶಿಕ್ಷಕರ ಸೇವಕನಂತೆ ಸುರೇಶ ನಾಯಕ ಕಾರ್ಯನಿರ್ವಹಿಸಿದ್ದರೆಂದರು.

ಗೌರವ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಸುರೇಶ ನಾಯಕ ಅವರು ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಮಹೋನ್ನತ ಅವಕಾಶ ದೊರೆತಿರುವುದು ನನ್ನ ಜೀವನದ ಬಹುದೊಡ್ಡ ಸೌಭಾಗ್ಯ. ಇಲಾಖೆಯ ಮೇಲಾಧಿಕಾರಿಗಳ ಮಾರ್ಗದರ್ಶನ, ಸಹೋದ್ಯೋಗಿಗಳ ಸಹಕಾರ, ಶಿಕ್ಷಕರ ಪ್ರೋತ್ಸಾಹವನ್ನು ಎಂದು ಮರೆಯಲಾಗದು. ಸರಕಾರಿ ನೌಕರರು ನೀಡಿದ ಸಹಕಾರ ಸದಾ ಸ್ಮರಣೀಯವಾಗಿದೆ. ಇನ್ನೂ ವಿಶೇಷವಾಗಿ ದಾಂಡೇಲಿಯ ಜನತೆಯ ಪ್ರೀತಿ, ಅಭಿಮಾನ ನನಗೆ ಸೇವೆ ಸಲ್ಲಿಸಲು ಮತ್ತಷ್ಟು ಶಕ್ತಿ ಹಾಗೂ ಉತ್ಸಾಹವನ್ನು ತುಂಬಿತ್ತು ಎಂದರು. ನಾನು ಕಲಿಸಿದ ಶಾಲೆಗಳ ಶಾಲಾಭಿವೃದ್ಧಿ ಸಮಿತಿಯ ಪದಾಧಿಕಾರಿಗಳು, ಪಾಲಕರು, ವಿದ್ಯಾರ್ಥಿಗಳು ಹಾಗೂ ಸಹೋದ್ಯೋಗಿಗಳು ಸಹೋದರತ್ವದ ಪ್ರೀತಿಯನ್ನು ತೋರಿಸಿದ್ದಾರೆ. ದಾಂಡೇಲಿ ನನಗೆ ಹೆಸರನ್ನು ತಂದುಕೊಟ್ಟಿದೆ. ಜೀವನೋತ್ಸಾಹದ ಜೊತೆಗೆ ಬದುಕು ಕಟ್ಟಿಕೊಟ್ಟಿದೆ ಎಂದರು. ದಾಂಡೇಲಿಯ ಅಸಂಖ್ಯಾತ ಗೆಳೆಯರ ಪ್ರೋತ್ಸಾಹ ಮತ್ತು ಸಹಕಾರಕ್ಕೆ ಎಷ್ಟು ಕೃತಜ್ಞತೆ ಸಲ್ಲಿಸಿದರು ಕಡಿಮೆ. ಶಿಕ್ಷಣ ಕ್ಷೇತ್ರದ ಸಾರ್ಥಕ ಸೇವೆಗೆ ನನ್ನ ಜೊತೆ ಕೈಜೋಡಿಸಿದ ಪತ್ನಿ, ಪುತ್ರ ಹಾಗೂ ಕುಟುಂಬಸ್ಥರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.

300x250 AD

ಇದೇ ಸಂದರ್ಭದಲ್ಲಿ ತಾಲೂಕಿನಲ್ಲಿ ಎಸ್.ಎಸ್.ಎಲ್. ಸಿ. ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸರಕಾರಿ ನೌಕರರ ಸಂಘದ ತಾಲೂಕು ಘಟಕದ ನೂತನ ಅಧ್ಯಕ್ಷ ಉತ್ಫಲ್ ಶಿರೋಡ್ಕರ್ ಅವರು ಸುರೇಶ ನಾಯಕ ಅವರು ನಡೆದ ಹಾದಿಯಲ್ಲಿ ಮುನ್ನಡೆಯುತ್ತಾ ಸಂಘದ ಸರ್ವ ಸದಸ್ಯರ ಕ್ಷೇಮಾಭಿವೃದ್ಧಿಗಾಗಿ ಶ್ರಮಿಸುತ್ತಾ, ಸಂಘದ ಬಲವರ್ಧನೆಗಾಗಿ ಪ್ರಾಮಾಣಿಕವಾಗಿ ನಮ್ಮನ್ನು ನಾವು ತೊಡಗಿಸಿಕೊಳ್ಳುತ್ತೇವೆ ಎಂದರು.

ಸರಕಾರಿ ನೌಕರರ ಸಂಘದ ಪದಾಧಿಕಾರಿಗಳಾದ ವಿನಾಯಕ ಪವಾರ್, ಗೌಡಪ್ಪ ಬನಕದಿನ್ನಿ, ಬಸವರಾಜ ಗಜಾಕೋಶ, ಪ್ರವೀಣ್ ನಾಯ್ಕ, ಆಗಸ್ಟಿನ್ ಕಾಳೆ, ಮಂಜುನಾಥ್, ದೀಪಾಲಿ ಪೆಡ್ನೇಕರ, ಮೀರ್ ಶೇಖ, ಪ್ರವೀಣ್ ಕುಮಾರ್ ಅವರಾದಿ, ಇಮ್ರಾನ್ ಶೇಖ, ನವೀನ್ ಕುಮಾರ್, ಉಪಸ್ಥಿತರಿದ್ದರು.

ವಿನಾಯಕ್ ಪವಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಕಾರ್ಯದರ್ಶಿ ಪ್ರವೀಣ ನಾಯ್ಕ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.

Share This
300x250 AD
300x250 AD
300x250 AD
Back to top